ಅಜಾದ್, ಮೌಲಾನಾ ಅಬುಲ್ ಕಲಂ
(1888-1958). ಭಾರತದಲ್ಲಿ ಹಿಂದೂಗಳು, ಮುಸ್ಲಿಮರು ಇಬ್ಬರೂ ಒಂದೇ ತಾಯ್ನಾಡಿನವರೆಂಬುದನ್ನು ಮನಗಂಡು ಅದಕ್ಕಾಗಿ ತಮ್ಮ ಜೀವನವನ್ನು ಸವೆಸಿದ ಭಾರತೀಯರಲ್ಲೊಬ್ಬರು. 
ತಂದೆ, ತಾಯಿ ಇಬ್ಬರ ಕಡೆಯವರೂ ಪ್ರಸಿದ್ಧ ವಿದ್ವಾಂಸ ಮನೆತನಕ್ಕೆ ಸೇರಿದವರು. ತಂದೆ ಮೌಲಾನಾ ಮೊಹಮ್ಮದ್ ಖೈರುದ್ದೀನ್ ವಿಖ್ಯಾತ ವಿದ್ವಾಂಸರಷ್ಟೇ ಅಲ್ಲದೆ ಧರ್ಮಗುರುವೂ ಆಗಿದ್ದರು. ಹಾeóï ಯಾತ್ರೆ ಮುಗಿಸಿದ ಮೇಲೆ ಅವರು ಕಲ್ಕತ್ತೆಯಲ್ಲಿ ನೆಲೆಸಿದರು. ಮುಸ್ಲಿಂ ಧರ್ಮದ ವಿಚಾರವಾಗಿ ಅವರು ಬರೆದ ಗ್ರಂಥಗಳು ಇಂದಿಗೂ ವಿದ್ವಾಂಸರಿಂದ ಮಾನ್ಯತೆ ಪಡೆದಿವೆ, ಪ್ರಮಾಣ ಗ್ರಂಥಗಳಾಗಿವೆ. ತಾಯಿಯೂ ದೊಡ್ಡ ವಿದ್ವಾಂಸ ಮನೆತನದವಳು; ಇಸ್ಲಾಂ ಧರ್ಮದ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದವಳು. ಹೀಗೆ ಆಜಾದರಿಗೆ ಪಾಂಡಿತ್ಯ ಎರಡು ಕಡೆಯಿಂದಲೂ ರಕ್ತಗತವಾಗಿ ಬಂದಿತ್ತು. ಧರ್ಮಗುರುವಿಗಿರಬೇಕಾದ ಸರಳ ಸಾತ್ವಿಕ ಮನೋಭಾವ, ಜ್ಞಾನಾರ್ಜನೆಯಲ್ಲಿ ಉತ್ಕಟೇಚ್ಛೆ, ಅಸದೃಶ ಪ್ರತಿಭೆ-ಇಷ್ಟೆಲ್ಲವನ್ನೂ ಹೊಂದಿದ್ದ ಆಜಾದರು, ತಮ್ಮ ಹದಿನಾರನೆಯ ವಯಸ್ಸಿನಲ್ಲೇ ಧರ್ಮಶಾಸ್ತ್ರ, ಕಾವ್ಯ ಮತ್ತು ಇತಿಹಾಸಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿ ದೊಡ್ಡ ದೊಡ್ಡ ವಿದ್ವಾಂಸರೊಂದಿಗೆ ಗಹನವಾದ ವಿಷಯಗಳ ಮೇಲೆ ಚರ್ಚೆ ನಡೆಸುತ್ತಿದ್ದುದೇನೂ ಹೆಚ್ಚಲ್ಲ. ತುರ್ಕಿ, ಇರಾಕ್, ಈಜಿಪ್ಟ್, ಸಿರಿಯಾ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ತಮ್ಮ ಜ್ಞಾನಭಂಡಾರವನ್ನು ಬೆಳೆಸಿದರು.
ತಮ್ಮ ಭಕ್ತರ ಕೋರಿಕೆಯನ್ನು ಮನ್ನಿಸಿ ಆeóÁದರ ತಂದೆ 1907ರಲ್ಲಿ ಭಾರತಕ್ಕೆ ಬಂದು ಕಲ್ಕತ್ತೆಯಲ್ಲಿ ನೆಲೆಸಿ ಮರುವರ್ಷವೇ ಕಾಲಾಧೀನರಾದರು. ಆeóÁದರು ಪಾಶ್ಚಾತ್ಯ ಸಂಸ್ಕøತಿಯನ್ನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಇಂಗ್ಲಿಷಿನಲ್ಲೂ ತಕ್ಕಮಟ್ಟಿಗೆ ಪರಿಶ್ರಮ ಸಂಪಾದಿಸಿದ್ದರು. ತಂದೆಯಂತೆ ಧರ್ಮಗುರುವಾಗಿರಬೇಕೆಂಬ ಆಸೆ ಅವರಿಗಿರಲಿಲ್ಲ. ನಾಡಿನ ದಾಸ್ಯ, ಬಡತನ, ಅಜ್ಞಾನ--ಇವು ಅವರ ಮನಸ್ಸನ್ನು ಸೆಳೆದವು. 

ಬಾಲ್ಯದಿಂದಲೂ ಪತ್ರಿಕೋದ್ಯಮದಲ್ಲಿ ತೀವ್ರ ಆಸಕ್ತಿ ಇದ್ದುದರಿಂದ ಆeóÁದರು, ಹದಿನೈದನೆಯ ವಯಸ್ಸಿನಲ್ಲೇ ಒಂದು ಪತ್ರಿಕೆ ಹೊರಡಿಸಿದರು. ಅವರ ಬರಹದ ಪಾಂಡಿತ್ಯ, ಪ್ರೌಢಿಮೆ, ಲಲಿತವೂ ಸರಳವೂ ಆದ ಶೈಲಿ ಇವೆಲ್ಲಾ ವಿದ್ವಾಂಸರ ಮನಸ್ಸನ್ನು ಸೆಳೆದವು. ಹಾಲಿ ಎಂಬ ಪ್ರಸಿದ್ಧ ಉರ್ದು ಕವಿ ಅವರ ಬರಹವನ್ನು ತುಂಬಾ ಮೆಚ್ಚಿದ. ಕೊಂಚ ಕಾಲಾನಂತರ ಆeóÁದರು ಆತನಿಗೆ ಭೆಟ್ಟಿಯಾದರು. ತಾನು ಅಷ್ಟೊಂದು ಮೆಚ್ಚಿದ ಬರಹದ ಕರ್ತೃ ಹದಿನಾರು ವಯಸ್ಸಿನ ಬಾಲಕನೆಂದು ತಿಳಿದಾಗ ಹಾಲಿ ವಿಸ್ಮಯಗೊಂಡ. ಹದಿನಾಲ್ಕನೆಯ ವಯಸ್ಸಿನಲ್ಲೇ ಆeóÁದರು ಬೊಂಬಾಯಿಯ ಪ್ರಸಿದ್ಧ ವಿದ್ವಾಂಸರಾಗಿದ್ದ ಮೌಲಾನಾ ಷಿಬ್ಲಿಯವರೊಂದಿಗೆ ಉರ್ದು ಸಾಹಿತ್ಯದ ವಿಷಯವಾಗಿ ಪತ್ರಮುಖೇನ ವಿಚಾರವಿನಿಮಯ ಪ್ರಾರಂಭಿಸಿದರು. ಅವರ ಬರವಣಿಗೆಯಲ್ಲಿ ಕಂಡುಬಂದ ವಿದ್ಯಾಪ್ರೌಢಿಮೆ, ಶೈಲಿ ಇವುಗಳನ್ನು ನೋಡಿ ಷಿಬ್ಲಿಯವರು ಅವರೊಬ್ಬ ಇಳಿವಯಸ್ಸಿನ ಮೌಲ್ವಿಯಿರಬೇಕೆಂದು ಭಾವಿಸಿದರು. ಎರಡು ವರ್ಷ ಹೀಗೆ ಕಳೆಯಿತು. ಆeóÁದರು ಬೊಂಬಾಯಿಗೆ ಹೋಗಿ ಷಿಬ್ಲಿಯವರನ್ನು ಭೇಟಿ ಮಾಡಿದರು. ಹದಿನಾರು ವಯಸ್ಸಿನ ಆ ಬಾಲಕ ತಮ್ಮೊಂದಿಗೆ ಪತ್ರ ವ್ಯವಹಾರ ಮಾಡುತ್ತಿದ್ದ ಆeóÁದರ ಮಗನೆಂದು ಭಾವಿಸಿ, ಅವರ ತಂದೆಯ ಪಾಂಡಿತ್ಯವನ್ನು ಬಹುವಾಗಿ ಶ್ಲಾಘಿಸಿದರು.

ಅವರು ಭಾವಿಸಿದ್ದ ತಂದೆ, ಎದುರು ಕೂತಿದ್ದ ಮಗ, ಇಬ್ಬರೂ ಒಂದೇ ಎಂದು ತಿಳಿದಾಗ ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ.
ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಭಾರತದ ಮುಸ್ಲಿಂ ಜನತೆ ಬಹಳ ಹಿಂದುಳಿದಿದ್ದಿತ್ತು. ಅವರಲ್ಲಿ ಶ್ರೀಮಂತರಾದ ಕೆಲವರು ಸ್ವಹಿತಸಾಧನೆಗೆ ಬ್ರಿಟಿಷರ ಅನುಯಾಯಿಗಳಾಗಿದ್ದರು. ಮಿಕ್ಕವರು ಅವಿದ್ಯಾವಂತರಾಗಿ ಬಡತನದಿಂದ ನರಳುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಭಾರತದ ಮುಸ್ಲಿಮರು ಎಚ್ಚೆತ್ತು, ವಿದ್ಯಾವಂತರಾಗಿ, ರಾಷ್ಟ್ರೀಯ ಭಾವನೆ ಬೆಳೆಸಿಕೊಂಡು ಹಿಂದೂಗಳೊಂದಿಗೆ ಬೆರೆತು, ನಾಡಿನ ಉದ್ಧಾರಕ್ಕಾಗಿ ಶ್ರಮಿಸುವುದು ಅತಿಮುಖ್ಯವಾಗಿತ್ತು. ಇದನ್ನು ಸಾಧಿಸುವುದಕ್ಕಾಗಿ ಆeóÁದರು 1912ರಲ್ಲಿ ಅಲ್ ಹಿಲಾಲ್ ಎಂಬ ಉರ್ದು ಪತ್ರಿಕೆಯನ್ನು ಹೊರಡಿಸಿ ಕಲಂ ಆeóÁದ್ (ಸ್ವತಂತ್ರ ಲೇಖನಿ) ಎಂಬ ಗುಪ್ತನಾಮದಿಂದ ವಿಪುಲವಾಗಿ ಬರೆದರು. ಅವರ ಮನನಾಟುವಂಥ ಬರಹ, ಅದರಲ್ಲಿ ಕಂಡುಬಂದ ಅವರ ರಾಷ್ಟ್ರಾಭಿಮಾನ, ಭಾರತದ ಏಳಿಗೆಯ ವಿಚಾರದಲ್ಲಿ ಅವರ ಗಾಢಾನುರಕ್ತಿ-ಇವೆಲ್ಲ ಜನಮನವನ್ನು ಸೆಳೆದವು. ಪ್ರಾರಂಭವಾದ ಆರು ತಿಂಗಳಲ್ಲೇ ಆ ಪತ್ರಿಕೆಯ ಪ್ರಸಾರಸಂಖ್ಯೆ ಹತ್ತು ಸಾವಿರಕ್ಕೇರಿತು. ಮುಸ್ಲಿಮರಲ್ಲಿ ರಾಷ್ಟ್ರೀಯ ಭಾವನೆ ಬೆಳೆಯತೊಡಗಿತು. ಹೀಗೆ ಉದ್ರಿಕ್ತರಾದ ತರುಣರಲ್ಲಿ ಆಗ ಆಲಿಘರ್ ವಿಶ್ವವಿದ್ಯಾನಿಯಲದ ವಿದ್ಯಾರ್ಥಿಯಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನರೂ ಒಬ್ಬರು.

ಕೊಂಚಕೊಂಚವಾಗಿ ಭಾರತೀಯರಲ್ಲಿ ರಾಷ್ಟ್ರೀಯತಾಭಾವನೆ ಬೆಳೆಯುತ್ತಿದ್ದ ಆ ಕಾಲದಲ್ಲಿ, ಮೊದಲನೆಯ ಮಹಾಯುದ್ಧ ಪ್ರಾರಂಭವಾಯಿತು. ಭೇದೋಪಾಯದಿಂದ ಹಿಂದೂ ಮುಸ್ಲಿಮರಲ್ಲಿ ವೈಮನಸ್ಯ ಹುಟ್ಟಿಸಿ ಅವರನ್ನು ಪ್ರತ್ಯೇಕಿಸಿದ್ದಲ್ಲದೆ, ತಮ್ಮ ಅಧಿಕಾರ ಭಾರತದಲ್ಲಿ ನಿಲ್ಲಲಾರದೆಂಬುದನ್ನರಿತಿದ್ದ ಬ್ರಿಟಿಷ್ ಸರ್ಕಾರ, ಆeóÁದರ ಚಟುವಟಿಕೆಗಳನ್ನು ಕಂಡು ಗಾಬರಿಗೊಂಡು ಅವರ ಪತ್ರಿಕೆಯ ಈಡು ಹಣವನ್ನು ವಶಪಡಿಸಿಕೊಂಡಿದ್ದಲ್ಲದೇ ಮೇಲೆ ಹತ್ತುಸಾವಿರ ರೂಪಾಯಿ ಠೇವಣಿ ಕೇಳಿತು. ಅಲ್ ಹಿಲಾಲ್ ನಿಲ್ಲಬೇಕಾಗಿ ಬಂತು. ಆದರೆ ಆಜಾದರು ಸುಮ್ಮನಿರಲಿಲ್ಲ; ಸರಕಾರಕ್ಕೆ ಅಷ್ಟೇ ಖಾರವಾದ ಅಲ್ ಬಲಾಗ್ ಪತ್ರಿಕೆ ಹೊರಡಿಸಿದರು. ಆಗ ಸರಕಾರ ಅವರಿಗೆ ಪ್ರಾದೇಶಿಕ ನಿರ್ಬಂಧ ವಿಧಿಸಿ ರಾಂಚಿಯಲ್ಲೇ ನಿಲ್ಲುವಂತೆ ಮಾಡಿತು. ಅವರ ನಿರ್ಬಂಧವನ್ನು ರದ್ದು ಮಾಡಿದ್ದು 1919 ರಲ್ಲಿ, ಮಹಾಯುದ್ಧ ನಿಂತು ಒಂದು ವರ್ಷ ಕಳೆದ ಮೇಲೆ. 
ಈ ಮಧ್ಯೆ, ಯುದ್ಧಕಾಲದಲ್ಲಿ ಬ್ರಿಟಿಷ್ ಸರಕಾರ ಖಿಲಾಫತ್ ವಿಚಾರದಲ್ಲಿ ಮುಸ್ಲಿಮರಿಗೆ ಕೊಟ್ಟಿದ್ದ ವಾಗ್ದಾನದಂತೆ ಯುದ್ಧಾನಂತರ ನಡೆದುಕೊಳ್ಳಲಿಲ್ಲ; ಇದರಿಂದ ಭಾರತದ ಮುಸ್ಲಿಮರೂ ಬ್ರಿಟಿಷರಿಗೆ ವಿರೋಧಿಗಳಾದರು. ಆeóÁದರ ಬೋಧನೆಯಿಂದ ಪ್ರಭಾವಿತರಾಗಿದ್ದ ಅವರು, ಕಾಂಗ್ರೆಸ್ಸಿನೊಡನೆ ಮೈತ್ರಿ ಬೆಳೆಸಿದರು. ರಾಷ್ಟ್ರೀಯ ಭಾವನೆಯಿಂದ ಪ್ರೇರಿತರಾಗಿ ಅನೇಕ ಮುಸ್ಲಿಮರು ಕಾಂಗ್ರೆಸ್ಸಿಗೆ ಸೇರಿದರು. ಕೆಲವು ಕಾಲ ಈ ಹಿಂದೂ ಮುಸ್ಲಿಂ ಮೈತ್ರಿ ರಾಷ್ಟ್ರದಲ್ಲಿ ಶಕತೆಯನ್ನುಂಟು ಮಾಡಿ, ದಾಸ್ಯ ವಿಮೋಚನೆ ಬಹು ದೂರವಿಲ್ಲ ಎಂಬ ಆಸೆಯನ್ನು ಜನರಲ್ಲಿ ಮೂಡಿಸಿತು. ಗಾಂಧೀಜಿಯ ಕರ ನಿರಾಕರಣೆ, ಸತ್ಯಾಗ್ರಹ, ಇವೆಲ್ಲ ಜನರಲ್ಲಿ ಹರಡಿದವು. ಆದರೆ ಬ್ರಿಟಿಷರು ಅರೆಮನಸ್ಸಿನಿಂದ ನೀಡಿದ ರಾಜಕೀಯ ಸುಧಾರಣೆಗಳನ್ನು ಒಪ್ಪಬೇಕೆ, ಬೇಡವೆ ಎಂಬ ವಿಷಯದಲ್ಲಿ ಕಾಂಗ್ರೆಸ್ಸಿಗರಲ್ಲೇ ಭಿನ್ನಾಭಿಪ್ರಾಯವುಂಟಾಗಿ ಏಕತೆಗೆ ಭಂಗವುಂಟಾಯಿತು. ಆeóÁದರು ಈ ಸುಧಾರಣೆಗೆ ವಿರೋಧವಾಗಿ ನಿಂತು, ಅಸಹಕಾರ ಚಳವಳಿಯನ್ನು ಮುಂದುವರಿಸಲೇಬೇಕು ಎಂದು ಜನರಿಗೆ ಕರೆ ಕೊಟ್ಟರು. ಅವರನ್ನು ಬಂಧಿಸಿ ಸರಕಾರಕ್ಕೆ ವಿರುದ್ಧವಾಗಿ ಚಳವಳಿ ನಡೆಸಿದರೆಂಬ ಆಪಾದನೆ ಹೊರಿಸಿ ಒಂದು ವರ್ಷ ಸಜಾ ವಿಧಿಸಿದರು. ತಾವು ನ್ಯಾಯಸ್ಥಾನದಲ್ಲಿ ಕೊಟ್ಟ ಹೇಳಿಕೆಯ ಕೊನೆಯಲ್ಲಿ ಆeóÁದರು ಈ ರೀತಿ ನುಡಿದರು: "ನೀವು ನ್ಯಾಯಮೂರ್ತಿಯಾಗಿಯೇ ಮುಂದುವರಿಯಿರಿ, ನಾನು ಅಪರಾಧಿಯಾಗಿಯೇ ಮುಂದುವರಿಯುತ್ತೇನೆ, ಮತ್ತೆ ಮತ್ತೆ. ಈ ನಾಟಕ ಕೊನೆಗೆ ಮುಗಿಯಲೇಬೇಕು, ಆಗ ಭಗವಂತನ ನ್ಯಾಯಾಸ್ಥಾನದಲ್ಲಿ ನಾವೂ ಸಂಧಿಸುತ್ತೇವೆ. ಕಾಲಪುರುಷನೇ ಅಲ್ಲಿ ನ್ಯಾಯಮೂರ್ತಿ, ಅವನು ಕೊಡುವ ತೀರ್ಪನ್ನು ನೀವಾಗಲಿ, ನಾನಾಗಲಿ ಉಲ್ಲಂಘಿಸಲಾರೆವು". ಒಂದು ವರ್ಷ ಕಾರಾಗೃಹ ವಿಧಿಸಿದ ವಿಷಯವಾಗಿ ಗಾಂಧೀಜಿಗೆ ಬರೆದ ಕಾಗದದಲ್ಲಿ ಆeóÁದರ ಪತ್ನಿ, ತನ್ನ ಪತಿಯ ದೇಶಪ್ರೇಮಕ್ಕೆ ಆ ಶಿಕ್ಷೆ ಏನೇನೂ ಸಾಲದೆಂದೂ, ಯಾರೂ ಅವರ ಬಿಡುಗಡೆಯ ಯೋಚನೆಯನ್ನು ಮಾಡಕೂಡದೆಂದು ತಿಳಿಸಿದ್ದರು. 

ಮುಂದೆ ಬ್ರಿಟಿಷ್ ಸರಕಾರ ನೀಡಿದ ಅಲ್ಪಸ್ವಲ್ಪ ಸುಧಾರಣೆಗಳನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ಕಾಂಗ್ರೆಸ್ಸಿನಲ್ಲೇ ಎರಡು ಪಂಗಡಗಳು ಹುಟ್ಟಿಕೊಂಡವು; ಗಾಂಧೀಜಿಯವರ ನೇತೃತ್ವದಲ್ಲಿ ಏರ್ಪಟ್ಟಿದ್ದ ಹಿಂದೂ ಮುಸ್ಲಿಂ ಏಕತೆ ಒಡೆಯಿತು; ಆಳರಸರು ತಮ್ಮ 'ಒಡೆದು ಆಳುವ (ಡಿವೈಡ್ ಅಂಡ್ ರೂಲ್) ನೀತಿಗನುಸಾರವಾಗಿ ವೈಮನಸ್ಯ ಬೆಳೆಯುವುದಕ್ಕೆ ನೆರವು ನೀಡಿದರು; ಹಿಂದೂ ಮುಸ್ಲಿಂ ಏಕತೆ ಸಾಧ್ಯವೇ ಇಲ್ಲ, ಹಿಂದುಗಳು ಮುಸ್ಲಿಮರು ಚಾರಿತ್ರಿಕವಾಗಿ, ಸಾಂಸ್ಕøತಿಕವಾಗಿ ಎರಡು ಪ್ರತ್ಯೇಕ ಜನಾಂಗಗಳು ಎಂಬ ಭಾವನೆ ಬೆಳೆಯುತ್ತ ಬಂದು, ಕೊನೆಗೆ ಜಿನ್ನಾರವರ ಪಾಕಿಸ್ತಾನ್ ಬೇಡಿಕೆ ಏಕತೆಯ ಚರಮಗೀತೆಯಾಯಿತು. ಆದರೂ ಹಿಂದೂಗಳು ರಾಷ್ಟ್ರೀಯತಾಭಾವನೆಯನ್ನುಳಿಸಿಕೊಂಡಿದ್ದ ಮುಸ್ಲಿಮರು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮುಂದುವರಿಸಿದರು; ಅನೇಕರು ಮಡಿದರು, ಲಕ್ಷಾಂತರ ಜನ ಕಷ್ಟನಷ್ಟಗಳನನ್ನುಭವಿಸಿದರು. ಕೊನೆಗೆ 1947ರಲ್ಲಿ ಸ್ವಾತಂತ್ರ್ಯದ ಹೂ ಮೊಗ್ಗು ಅರಳಿತು. ಈ ಪರ್ವಕಾಲದಲ್ಲಿ ಆeóÁದರು ಗಾಂಧೀಜಿಯವರ ಬಲಗೈಯಾಗಿ ನಿಂತು ರಾಷ್ಟ್ರದ ಸ್ವಾತಂತ್ರ್ಯ ಏಕತೆಗಳಿಗಾಗಿ ದುಡಿದರು; ಎರಡು ಬಾರಿ ದೇಶದ ಅತ್ಯಂತ ಬಿಕ್ಕಟ್ಟಿನ ಕಾಲಗಳಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ನಿಂತು ಅಸಾಧಾರಣ ಸಾಮಥ್ರ್ಯದಿಂದ ಈ ಸಂಸ್ಥೆಯ ಕಾರ್ಯಕಲಾಪಗಳನ್ನು ನಿಯಂತ್ರಿಸಿದರು; ವಿರೋಧಿ ಮುಸ್ಲಿಂ ಪಂಗಡದವರ ಈರ್ಷೆ, ಅವಹೇಳನ, ಉಪದ್ರವಗಳನ್ನು ಕಡೆಗಣಿಸಿ ದೃಢನಿಶ್ಚಯದಿಂದ ದೇಶಸೇವೆಯನ್ನು ಮುಂದುವರಿಸಿದರು; ಸ್ವಾತಂತ್ರ್ಯ ಬಂದ ಮೇಲೆ ಕೇಂದ್ರ ಸರ್ಕಾರದ ವಿದ್ಯಾಮಂತ್ರಿಯಾದರು. ಅವರ ಪಾಂಡಿತ್ಯ ಅನೇಕ ವೇಳೆ ನಮ್ಮನ್ನು ಭಾವಪರವಶರನ್ನಾಗಿ ಮಾಡುತ್ತಿತ್ತು ಎಂಬುದಾಗಿ ಜವಾಹರಲಾಲ್ ನೆಹರೂ ತಮ್ಮ ಆತ್ಮಚರಿತ್ರೆಯಲ್ಲಿ ಒಂದೆಡೆ ಬರೆದಿದ್ದಾರೆ.											     
(ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ